ಪಾಂಡವಪುರ, ಸೆ.9: ಪಾಂಡವಪುರದಲ್ಲಿ ಮೊದಲ ಬಾರಿಗೆ 40ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ, ಪುಟ್ಟಣ್ಣಯ್ಯ ಫೌಂಡೇಶನ್ ಮತ್ತು ಕರ್ನಾಟಕ ರಾಜ್ಯ ರೈತ ಸಂಘವು ಸೆಪ್ಟೆಂಬರ್ 13ರಂದು ಸ್ವರಾಜ್ ಉತ್ಸವ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮಕ್ಕೆ ಭರದಿಂದ ಸಿದ್ಧತೆಗಳು ನಡೆಯುತ್ತಿವೆ.
ತಾಲೂಕಿನ ಪಾಂಡವ ಕ್ರೀಡಾಂಗಣದಲ್ಲಿ ಸ್ವರಾಜ್ ಉತ್ಸವಕ್ಕೆ ವೇದಿಕೆ ಸಿದ್ಧಗೊಂಡಿದೆ. ಆನೋಡ್ ಗವರ್ನನ್ಸ್ ಲ್ಯಾಬ್, ಬಝ್ವುಮನ್, ಪ್ರಾಜೆಕ್ಟ್ ಡಿಫೈ, ಲರ್ನಿಂಗ್ ಮ್ಯಾಟರ್ಸ್, ಜನಪದ ಸೇವಾ ಟ್ರಸ್ಟ್, ಸೆಲ್ಕೋ ಫೌಂಡೇಶನ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ 12 ವಿಷಯಗಳ ಆಧಾರದ ಮೇಲೆ ಚರ್ಚೆ, ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಗಳನ್ನು ನಡೆಸಲಿವೆ. ಈ ಕಾರ್ಯಕ್ರಮಕ್ಕಾಗಿ ತಯಾರಿಗಳು ಭರದಿಂದ ಸಾಗುತ್ತಿವೆ.
ಕಾರ್ಯಕ್ರಮದ ಮುಖ್ಯ ಆಕರ್ಷಣೆಗಳಾಗಿ ಬೀಜ ವೈವಿಧ್ಯ ಮೇಳ, ಮಹಿಳಾ ನಾಯಕತ್ವ ಚರ್ಚೆ, ತ್ಯಾಜ್ಯ ಮರುಬಳಕೆಯ ಪ್ರದರ್ಶನ, ಎಐ ಮತ್ತು ಶಿಕ್ಷಣ ತಂತ್ರಜ್ಞಾನ ಪರಿಹಾರಗಳು ಇರಲಿವೆ. ಇವುಗಳ ಜೊತೆಗೆ ಸಂವಾದಗಳು, ಆಟಗಳು ಮತ್ತು ಕಲಾಪ್ರದರ್ಶನಗಳು ಕೂಡ ನಡೆಯಲಿವೆ.
ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ, “ಇದೊಂದು ವಿನೂತನ ಪ್ರಯತ್ನವಾಗಿದೆ. ಗ್ರಾಮೀಣ ವಿಕಾಸದ ದೃಷ್ಟಿಯಿಂದ ಇಂದು ಇಂತಹ ಕಾರ್ಯಕ್ರಮ ಅತ್ಯಂತ ಅಗತ್ಯವಾಗಿದೆ. 40ಕ್ಕೂ ಹೆಚ್ಚು ಸಂಸ್ಥೆಗಳು ತಮ್ಮ ಅನುಭವ ಮತ್ತು ಜ್ಞಾನವನ್ನು ನಮ್ಮ ಕ್ಷೇತ್ರದ ಜನರೊಂದಿಗೆ ಹಂಚಿಕೊಳ್ಳಲು ಆಗಮಿಸುತ್ತಿವೆ. ಈ ಕಾರ್ಯಕ್ರಮವು ಜನರ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ ಮತ್ತು ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಾಯ ಮಾಡಲಿದೆ ಎಂದು ನಾನು ನಂಬಿದ್ದೇನೆ,” ಎಂದು ಹೇಳಿದರು.

ಕಾರ್ಯಕ್ರಮದ ತಯಾರಿಕುರಿತು ಕೆನ್ನಾಳು ವಿಜಯ್ ಕುಮಾರ್ ತಾಲೂಕು ರೈತ ಸಂಘದ ಅಧ್ಯಕ್ಷರು ಮಾತನಾಡಿ “ಕಾರ್ಯಕ್ರಮಕ್ಕೆ ಹತ್ತು ಸಾವಿರದಿಂದ ಹದಿನೈದು ಸಾವಿರ ಜನರು ಸೇರುವ ನಿರೀಕ್ಷೆ ಇದೆ, ಎಲ್ಲಾ ಸುವ್ಯವಸ್ಥಿತವಾಗಿ ತಯಾರಿ ನಡೆಯುತ್ತಿದೆ ಈ ಕಾರ್ಯಕ್ರಮ ನಮಗೆ ಬಹಳಷ್ಟು ನಿರೀಕ್ಷೆಯನ್ನು ಹುಟ್ಟಿಸಿದೆ” ಎಂದು ಹೇಳಿದರು.
ಕಾರ್ಯಕ್ರಮದ ಸಹಸಂಯೋಜಕಿಯಾಗಿರುವ ಕವಿತಾ ಕುರುಗುಂಟಿ ಅವರು ಮಾತನಾಡಿ, “ತಮ್ಮ ಕ್ಷೇತ್ರದ ಬಗ್ಗೆ ದೂರದೃಷ್ಟಿ ಹೊಂದಿರುವ ಚುನಾಯಿತ ಪ್ರತಿನಿಧಿಗಳು ಸಿಗುವುದು ಅಪರೂಪ. ಒಂದು ವೇಳೆ ಯಾರಿಗಾದರೂ ದೂರದೃಷ್ಟಿ ಇದ್ದರೂ, ಆ ದೃಷ್ಟಿಕೋನವನ್ನು ಕ್ಷೇತ್ರದ ನಾಗರಿಕರೊಂದಿಗೆ ಚರ್ಚಿಸಿ, ಅವರ ಭವಿಷ್ಯದ ಕಲ್ಪನೆಯನ್ನು ತಿಳಿಯಲು ಪ್ರಯತ್ನಿಸುವವರು ಕಡಿಮೆ. ದರ್ಶನ್ ಪುಟ್ಟಣ್ಣಯ್ಯ ಅವರ ವಿಷಯದಲ್ಲಿ ಈ ಎರಡೂ ಗುಣಗಳು ಕಂಡುಬರುತ್ತವೆ. ಸ್ವರಾಜ್ ಉತ್ಸವವು ಕ್ಷೇತ್ರದ ಸಮುದಾಯದೊಂದಿಗೆ ಸಮಗ್ರ ದೃಷ್ಟಿಕೋನವನ್ನು ರೂಪಿಸುವ ಪ್ರಕ್ರಿಯೆಯಾಗಿದೆ. ಈ ಉತ್ಸವವು ಸ್ವರಾಜ್ಯ, ಯೋಗಕ್ಷೇಮ, ಸುಸ್ಥಿರ ಅಭಿವೃದ್ಧಿ, ಘನತೆ, ಸ್ಥಳೀಯ ಪರಂಪರೆಯ ಹೆಮ್ಮೆ ಮತ್ತು ನಮ್ಮ ಸಾಮರ್ಥ್ಯಗಳ ಬಗ್ಗೆ ಒತ್ತು ನೀಡುತ್ತದೆ. ಮೇಲುಕೋಟೆ ಕ್ಷೇತ್ರದ ಜನರು ನಿಜಕ್ಕೂ ಅದೃಷ್ಟವಂತರು. ಈ ಸಂವಾದದಲ್ಲಿ ಅವರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುವರೆಂದು ನಾವು ಆಶಿಸುತ್ತೇವೆ,” ಎಂದು ತಿಳಿಸಿದರು.








