ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಬುಧವಾರ ನಡೆದ ರೈತ ಸಂಘ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಫೌಂಡೇಷನ್ನಿಂದ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ರಾಜ್ಯದ ವಿವಿಧ ಭಾಗಗಳ ಸುಮಾರು 25 ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಲಿವೆ’ ಎಂದರು.
‘ಸ್ವರಾಜ್ ಉತ್ಸವದಲ್ಲಿ ಮುಖ್ಯವಾಗಿ ಶಿಕ್ಷಣ, ಆರೋಗ್ಯ, ಕೃಷಿ, ಯುವ ಜನತೆ, ಆರ್ಥಿಕತೆ, ಪ್ರವಾಸೋದ್ಯಮ, ಪರಿಸರ, ವಿಜ್ಞಾನ, ಹವಮಾನ ವೈಪರೀತ್ಯ ಸೇರಿದಂತೆ ಪ್ರಮುಖವಾಗಿ 12 ಅಂಶಗಳನ್ನು ಒಳಗೊಂಡಂತೆ ಚರ್ಚೆ ನಡೆಸಿ ಅರಿವು ಮೂಡಿಸಲಾಗುವುದು. ಉತ್ಸವದಲ್ಲಿ ಭಾಗವಹಿಸುವ ಜನರು ತಮ್ಮ ಆಸಕ್ತಿಗೆ ಅನುಗುಣವಾಗಿ ಯಾವುದಾರೊಂದು ಕ್ಷೇತ್ರವನ್ನು ಆಯ್ಕೆಮಾಡಿಕೊಂಡು ತಮ್ಮನ್ನು ತೊಡಗಿಸಿಕೊಂಡು ಸ್ವಾವಲಂಬಿಗಳಾಗಬೇಕು’ ಎಂದು ಹೇಳಿದರು.
‘ಇದುವರೆಗೂ ಚಳವಳಿ, ಹೋರಾಟ ಮಾಡಿ ರೈತರ ಹಿತಕಾಯುತ್ತಿದ್ದೇವೆ. ಆದರೆ, ಹೋರಾಟದ ಜತೆಗೆ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ಪುಟ್ಟಣ್ಣಯ್ಯ ಫೌಂಡೇಷನ್ ವತಿಯಿಂದ ಸ್ವರಾಜ ಉತ್ಸವ ನಡೆಸಿ ನಮ್ಮ ಹಳ್ಳಿಗಳು ಸ್ವಾವಲಂಬನೆಯಾಗಿ ಬದುಕುವಂತೆ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.
ಸಂಶೋಧಕಿ ಕವಿತಾ ಕುರಗಂಟಿ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲ್ಲೂಕು ಅಧ್ಯಕ್ಷ ಕೆನ್ನಾಳು ವಿಜಯಕುಮಾರ್, ಕಾರ್ಯದರ್ಶಿ ವೈ.ಎಚ್.ಕೊಪ್ಪಲು ಮಂಜುನಾಥ್, ಜಿ.ಪಂ.ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ಪುಟ್ಟಣ್ಣಯ್ಯ ಫೌಂಡೇಷನ್ನ ರಣಜಿತ್ ಇದ್ದರು.









