ಪಾಂಡವಪುರ, ಸೆ.13: ಪುಟ್ಟಣ್ಣಯ್ಯ ಫೌಂಡೇಶನ್ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಸಹಯೋಗದಲ್ಲಿ ಸೆ.13ರಂದು ನಡೆಯಲಿರುವ ಸ್ವರಾಜ್ಯ ಉತ್ಸವದ ಹಿನ್ನೆಲೆಯಲ್ಲಿ ರೈತ ಸಂಘದ ಕಾರ್ಯಕರ್ತರು ಭರದ ಪ್ರಚಾರ ಆರಂಭಿಸಿದ್ದಾರೆ.
ರೈತ ಸಂಘದ ಯುವ ಮುಖಂಡರಾದ ಅನಿಲ್ ಬೇವಿನಕುಪ್ಪೆ ಅವರ ನೇತೃತ್ವದಲ್ಲಿ
ಮಂಗಳವಾರ ಬೆಳಿಗ್ಗೆ ಪಾಂಡುಪುರ ತಾಲೂಕಿನ ಬಸ್ ನಿಲ್ದಾಣ ಮತ್ತು ತರಕಾರಿ ಮಾರುಕಟ್ಟೆಗಳಲ್ಲಿ ಜನಸಾಮಾನ್ಯರಿಗೆ ಕರಪತ್ರವನ್ನು ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಪಾಂಡವಪುರ ತಾಲೂಕಿನ ಬನಗಾಟ, ಬೇವಿನಕೊಪ್ಪ, ಬಳೆದಕುಪ್ಪೆ, ಕೆ. ಹೊಸೂರ್, ಹಿರೇಮರಳಿ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿಮಾಡಿ ಕಾರ್ಯಕ್ರಮದ ವಿವರಗಳನ್ನು ನೀಡಿ ಭಾಗವಹಿಸಿ ಎಂದು ಮನವಿ ಮಾಡಿಕೊಂಡರು.
” ಈ ಕಾರ್ಯಕ್ರಮದಲ್ಲಿ 40ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆಗಳು ಭಾಗವಹಿಸಲಿದ್ದು ಆಡಳಿತ, ಲಿಂಗ ಸಮಾನತೆ- ಸಾಮಾಜಿಕ ನ್ಯಾಯ, ಶಿಕ್ಷಣ-ಯುವಸಬಲೀಕರಣ, ಕೃಷಿ-ಸ್ಥಳೀಯ ಆರ್ಥಿಕತೆ, ಯುವಜನ-ಉದ್ಯಮಶೀಲತೆ, ತ್ಯಾಜ್ಯ ನಿರ್ವಹಣೆ, ಪ್ರವಾಸೋದ್ಯಮ, ಪರಿಸರ, ಆರೋಗ್ಯ, ಮೂಲಸೌಕರ್ಯ ಈ ತರಹದ ವಿಷಯಗಳ ಮೇಲೆ ಚರ್ಚೆ, ಸಂವಾದ ಮತ್ತು ಪ್ರದರ್ಶನಗಳು ಮಾಡಲಿದ್ದಾರೆ. ಸ್ವಾವಲಂಬಿ, ಸ್ವಾಭಿಮಾನಿ ಗ್ರಾಮಗಳನ್ನು ನಿರ್ಮಿಸಲು ತಾವೆಲ್ಲರೂ ಈ ಉತ್ಸವದಲ್ಲಿ ಭಾಗವಹಿಸುವುದು ಮುಖ್ಯ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದುರೈತ ಸಂಘದ ಕಾರ್ಯಕರ್ತರು ಮನವಿ ಮಾಡಿದರು.
ಸೆಪ್ಟೆಂಬರ್ 13ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5ಗಂಟೆಯವರೆಗೆ ಪಾಂಡವಪುರದ ಪಾಂಡವ ಕ್ರೀಡಾಂಗಣದಲ್ಲಿ ಸ್ವರಾಜ್ ಉತ್ಸವ ನಡೆಯಲಿದೆ.








