- ಆಹಾರದಿಂದ ತಂತ್ರಜ್ಞಾನದವರೆಗೆ ವೈವಿಧ್ಯಮಯ ಮಳಿಗೆಗಳ ಆಕರ್ಷಣೆ
ಪಾಂಡವಪುರ, ಸೆ. 13- ಪಾಂಡವ ಕ್ರೀಡಾಂಗಣದಲ್ಲಿ ನಡೆದ ಸ್ವರಾಜ್ ಉತ್ಸವವು ವೈವಿಧ್ಯಮಯ ಮಳಿಗೆಗಳ ಸಮಾಗಮದಿಂದ ಕಳೆಗಟ್ಟಿತು. ಆರೋಗ್ಯ, ಕೃಷಿ, ಯುವಜನ ಸಬಲೀಕರಣ, ಮಹಿಳಾ ಸಶಕ್ತೀಕರಣ, ಪರಿಸರ, ತಂತ್ರಜ್ಞಾನ, ತ್ಯಾಜ್ಯ ನಿರ್ವಹಣೆ ಸೇರಿದಂತೆ 12ಕ್ಕೂ ಹೆಚ್ಚು ವಿಷಯಗಳಿಗೆ ಸಂಬಂಧಿಸಿದ 50ಕ್ಕೂ ಅಧಿಕ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ಮಳಿಗೆಗಳು ಜನರ ಗಮನ ಸೆಳೆದವು. ಆಧುನಿಕ ತಂತ್ರಜ್ಞಾನದಿಂದ ಹಿಡಿದು ಸೌಂದರ್ಯದ ಹೂವಿನ ಗಿಡಗಳವರೆಗೆ, ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುವ ಮಳಿಗೆಗಳು ಉತ್ಸವಕ್ಕೆ ವಿಶಿಷ್ಟ ಆಕರ್ಷಣೆ ತಂದವು.
ವಿಶೇಷವಾಗಿ, ಸಾಹಸ್ ಫೌಂಡೇಶನ್ನ ಮಳಿಗೆಯಲ್ಲಿ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಕವರ್ಗಳಿಂದ ಕಲಾತ್ಮಕವಾಗಿ ರೂಪಿಸಲಾದ ‘ಪ್ಲಾಸ್ಟಿಕ್ ಅಸುರ’ ಎಲ್ಲರ ದೃಷ್ಟಿಯನ್ನು ತನ್ನತ್ತ ಸೆಳೆಯಿತು, ಜೊತೆಗೆ ತ್ಯಾಜ್ಯ ನಿರ್ವಹಣೆಯ ಕುರಿತು ಸಂದೇಶವನ್ನೂ ಸಾರಿತು.
ಮೈಸೂರು ಸ್ಕೂಲ್ ಆಫ್ ಆರ್ಕಿಟೆಕ್ಚರ್ ಕ್ಯಾತನಹಳ್ಳಿ ಗ್ರಾಮದ ವಿನೂತನ ವಿನ್ಯಾಸವೂ ಆಕರ್ಷಕವಾಗಿತ್ತು. ಪರಿಸರ ಸ್ನೇಹಿಯಾದ, ಬಹುಪಯೋಗಿಯಾದ ಈ ವಿನ್ಯಾಸದ ಬಗ್ಗೆ ಸಾರ್ವಜನಿಕರ ಕುತೂಹಲದಿಂದ ವೀಕ್ಷಿಸಿದರು.
ಮಹಿಳಾ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವ ಸೆಲ್ಕೊದ ಸೌರಚಾಲಿತ ಯಂತ್ರಗಳು, ಸ್ವರಾಜ್ಯ ರೈತ ವೇದಿಕೆಯ ಸಾವಯವ ಕೃಷಿ ಕುರಿತು ವಿಶಾಲವಾದ ಮಳಿಗೆ ಕೃಷಿ ಪದ್ಧತಿ, ಸಾಕ್ರಟಸ್ ಸಂಸ್ಥೆಯ ದುದ್ದ ಗ್ರಾಮ ಕುರಿತ ಅಧ್ಯಯನ ಆಧರಿಸಿದ ಸಚಿತ್ರ ಪ್ರದರ್ಶನ, ಪೊಲಿಟಿ ಆಕ್ಷನ್ ಲ್ಯಾಬ್ ಸಂವಿಧಾನಕ್ಕೆ ಚಟುವಟಿಕೆಗಳಿಂದ ಕೂಡಿದ ಮಳಿಗ್ ಸಾರ್ವಜನಿಕರನ್ನು ಸೆಳೆಯಿತು.
ವಿಶೇಷ ಆಕರ್ಷಣೆ

ಕೂಡ್ಲಿಗಿಯಿಂದ ಆಗಮಿಸಿದ್ದ ಶಾಸಕ ಡಾ. ಎನ್ ಟಿ ಶ್ರೀನಿವಾಸ್ ಹಾಗೂ ಅವರ ಪತ್ನಿ ಡಾ. ಪುಷ್ಪ ಸ್ವರಾಜ್ ಉತ್ಸವದ ಮಳಿಗೆಗಳಿಗೆ ಭೇಟಿ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನೂ ಮೊದಲ ಬಾರಿಗೆ ಶಾಸಕನಾದವನು. ದರ್ಶನ ಕೂಡ ಮೊದಲ ಬಾರಿಗೆ ಶಾಸಕರಾದವರು. ಅವರು ಮಾಡುತ್ತಿರುವ ಕೆಲಸಗಳ ಬಗ್ಗೆ ಕುತೂಹಲ ಹಾಗೂ ಅಭಿಮಾನದಿಂದ ಇಲ್ಲಿಗೆ ಬಂದೆ. ನಿಜಕ್ಕೂ ಈ ಕೆಲಸಗಳು ಎಲ್ಲ ಊರುಗಳಿಗೆ ತಲುಪಬೇಕು. ನಮ್ಮ ಕ್ಷೇತ್ರದಲ್ಲೂ ಇಂತಹ ಕೆಲಸ ಮಾಡಬೇಕೆಂಬಷ್ಟು ಸ್ಫೂರ್ತಿ ತುಂಬುವಂತಿದೆ ಈ ಉತ್ಸವʼ ಎಂದು ಹೇಳಿದರು.
ಸಾವಿರಾರ್ ಸಾರ್ವಜನಿಕರೊಂದಿಗೆ ಪಾಂಡವಪುರದ ಉಪ ವಿಭಾಗಾಧಿಕಾರಿ ಶ್ರೀನಿವಾಸ್ ಅವರು ಹಾಗೂ ವಿವಿಧ ಅಧಿಕಾರಿಗಳು ಮಳಿಗೆಗಳಿಗೆ ಭೇಟಿ ನೀಡಿದರು.








